Wednesday, November 04, 2009

ಕರ್ನಾಟಕದ ' ಜನ ಗಣ ಮನ '

.



ಜಯ ಭಾರತ ಜನನಿಯ ತನುಜಾತೆ
        ಜಯ ಹೇ ಕರ್ನಾಟಕ ಮಾತೆ !
ಜಯಸುಂದರ ನದಿವನಗಳ ನಾಡೇ
        ಜಯ ಹೇ ರಸರುಷಿಗಳ ಬೀಡೆ

ಭೂದೇವಿಯ ಮಕುಟದ ನವಮಣಿಯೆ
ಗಂಧದ ಚಂದದ ಹೊನ್ನಿನ ಗಣಿಯೆ ;
ರಾಘವ ಮಧುಸೂದನರವತರಿಸಿದ
        ಭಾರತ ಜನನಿಯ ತನುಜಾತೆ
        ಜಯ ಹೇ ಕರ್ನಾಟಕ ಮಾತೆ !

ಜನನಿಯ ಜೂಗುಳ ವೇದದ ಘೋಷ
ಜನಿಯ ಜೀವವು ನಿನ್ನಾವೇಷ
        ಹಸುರಿನ ಗಿರಿಗಳ ಸಾಲೆ
        ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ !


ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
        ರನ್ನ ಷಡಕ್ಷರಿ ಪೊನ್ನ
        ಪಂಪ ಲಕುಮಿಪತಿ ಜನ್ನ
ಕಬ್ಬಗರುದಿಸಿದ ಮಂಗಳಧಾಮ
ಕವಿಕೋಗಿಲೆಗಳ ಪುಣ್ಯಾರಾಮ !
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ !


ತೈಲಪ ಹೊಯ್ಸಳರುದಿಸಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ ;
        ಕೃಷ್ಣ ಶರಾವತಿ ತುಂಗಾ
        ಕಾವೇರಿಯ ವರರಂಗಾ
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ !

ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
        ಹಿಂದೂ ಕ್ರೈಸ್ತ ಮುಸಲ್ಮಾನ
        ಪಾರಸೀಕ ಜೈನರುದ್ಯಾನ
        ಜನಕನ ಹೋಲುವ ದೊರೆಗಳ ಧಾಮ
        ಗಾಯಕ ವೈಣಿಕರಾರಾಮ !
        ಕನ್ನಡ ನುಡಿ ಕುಣಿದಾಡುವ ಗೇಹ !
        ಕನ್ನಡ ತಾಯಿಯ ಮಕ್ಕಳ ದೇಹ !


ಜಯ ಭಾರತ ಜನನಿಯ ತನುಜಾತೆ
        ಜಯ ಹೇ ಕರ್ನಾಟಕ ಮಾತೆ !
ಜಯಸುಂದರ ನದಿವನಗಳ ನಾಡೇ
        ಜಯ ಹೇ ರಸರುಷಿಗಳ ಬೀಡೆ


- ಕುವೆಂಪು




No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/